ದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ನನ್ನ ಮನಸ್ಸು ತೀವ್ರವಾಗಿ ನೊಂದಿದ್ದು, ದಾಳಿಯ ಚಿತ್ರಣ ನೋಡಿ ಪ್ರತಿಯೋರ್ವ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ರವಿವಾರ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.\
ಪ್ರಧಾನಿ ತಮ್ಮ ‘ಮನ್ ಕೀ ಬಾತ್” ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿರುವ ಭಯೋತ್ಪಾದಕಾರಿಗೆ ಹಾಗೂ ಆ ದಾಳಿಯ ಹಿಂದೆ ಪರೋಕ್ಷವಾಗಿ ಭಾಗಿಯಾಗಿರುವವರಿಗೆ ಸೂಕ್ತ ಶಿಕ್ಷೆ ಒದಗಿಸಲಾಗುವುದು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತೀಯರ ಒಗ್ಗಟ್ಟೇ ದೇಶದ ಬಲು ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಆಗುತ್ತಿರುವ ಶಾಂತಿ ಮರು ಸ್ಥಾಪನೆ, ಪ್ರವಾಸೋದ್ಯಮ ದಾಖಲೆ ಪ್ರಮಾಣ ಹೆಚ್ಚಳ ಕಂಡಿರುವಾಗ ಹಾಗೂ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ ಹಾಗೂ ಕಾಶ್ಮೀರದ ಯುವಜನತೆಗ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಭಯೋತ್ಪಾದಕ ದಾಳಿಯು ಭಯೋತ್ಪಾದಕರು ಹಾಗೂ ಅವರನ್ನು ಪೋಷಿಸುವವರಲ್ಲಿನ ಹೇಡಿತನವನ್ನು ಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.