ಕೋಟೂರ ಶಿವಾಪೂರ: ಜಗದ್ಗುರುಗಳ ಅಡ್ಡ ಪಲ್ಲಕಿ ಉತ್ಸವ

1 Min Read

ಯರಗಟ್ಟಿ: ತಾಲೂಕಿನ ಕೋಟೂರ ಶಿವಾಪೂರ ಗ್ರಾಮದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಚಾರ್ಯರ ಅಡ್ಡ ಪಲ್ಲಕಿ ಮಹೋತ್ಸವ ರವಿವಾರ ಜರುಗಿತು.

ಪಲ್ಲಕಿ ಉತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಜಗದ್ಗುರುಗಳು ಮಾತನಾಡಿ, ಸಂಪತ್ತನ್ನು ಯಾವುದೇ ವ್ಯಕ್ತಿಯಾಗಲೀ ನ್ಯಾಯಯುತವಾಗಿ ಗಳಿಸಬೇಕು. ಅಂತಹ ಸಂಪತ್ತು ಶಾಶ್ವತವಾಗಿರುತ್ತದೆಯೇ ಹೊರತು ಅನ್ಯಾಯದಿಂದ ಗಳಿಸಿದ ಸಂಪತ್ತು ಇರುವುದಿಲ್ಲ. 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮವೇ ದೊಡ್ಡದು. ಇಂತಹ ಮಹಾಜನ್ಮ ಪಡೆದ ಮಾನವರು ಸದಾ ಧರ್ಮ, ಸಮಾನತೆಗೆ ಹೆಚ್ಚು ಆದ್ಯತೆ ನೀಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿಯೊಬ್ಬರು ದಶಧರ್ಮದ ಸೂತ್ರಗಳಂತೆ ಧರ್ಮಚಾರದಲ್ಲಿ ನಡೆದು ಜೀವನ ಪಾವನ ಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಬೀದಿಗಳಲ್ಲಿ ಹೂವುಗಳಿಂದ ಅಲಂಕೃತಗೊಂಡ ಬೆಳ್ಳಿ ಪಲ್ಲಕಿಯಲ್ಲಿ ಜಗದ್ಗುರುಗಳ ಅಡ್ಡ ಪಲ್ಲಕಿ ಉತ್ಸವ ಸಕಲ ಮಂಗಳ ವಾದ್ಯಗಳೊಂದಿಗೆ ನಡೆಯಿತು.

ಭಾಗೋಜಿಕೊಪ್ಪ ಡಾ.ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಹರ್ಲಾಪೂರ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಮೊರಬದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂತೂರ ಬೆಂತೂರ ಕುಮಾರ ದೇವರು, ಚರಂತೇಶ್ವರ ದೇವರು, ಬಸಯ್ಯ ಹಿರೇಮಠ, ಮಹಾದೇವಪ್ಪ ನಿಂ. ಗಡ್ಡಿ, ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ, ಡಾ.ಕೆ.ವ್ಹಿ. ಪಾಟೀಲ, ಪುಂಡಲೀಕ ಮೇಟಿ, ಶಿಂಗಯ್ಯ ಮಠಪತಿ, ಶಿವಾನಂದ ಕಟ್ಟಿಮನಿ, ಸೇರಿದಂತೆ ಕೋಟೂರ ಶಿವಾಪೂರ ಮತ್ತು ಸುತ್ತಮುತ್ತಲಿನ ಗ್ರಾಮದ ಸಮಸ್ತ ಗುರುಹಿರಿಯರು ಸದ್ಭಕ್ತರು ಇದ್ದರು.

(ವರದಿ: ಈರಣ್ಣಾ ಹೂಲ್ಲೂರ)

Share This Article
Leave a Comment

Leave a Reply

Your email address will not be published. Required fields are marked *

error: Content is protected !!