APMCಗೆ CM ಡಿಕೆಶಿ ದಿಢೀರ್ ಭೇಟಿ ಬೆನ್ನಲ್ಲೇ ಫೀಲ್ಡಿಗಿಳಿದ ಪೊಲೀಸರು; 19 ಬಾಲ ಕಾರ್ಮಿಕರ ರಕ್ಷಣೆ; ನಾಲ್ಕು ಅಂಗಡಿ ಮಾಲೀಕರ ಬಂಧನ!

1 Min Read

ಸಿಎಂ ಭೇಟಿ ಬೆನ್ನಲ್ಲೇ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಮೇಲೆ ದಾಳಿ ನಡೆಸಿದ ಪೊಲೀಸರು, 19 ಅಪ್ರಾಪ್ತರನ್ನು ರಕ್ಷಿಸಿದ್ದಾರೆ ಮತ್ತು ನಾಲ್ವರು ಅಂಗಡಿ ಮಾಲೀಕರನ್ನು ಬಂಧಿಸಿದ್ದಾರೆ.

 

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ, ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರೊಂದಿಗೆ ನೇರ ಮಾತುಕತೆ ನಡೆಸಿದ್ದರು. ಈ ವೇಳೆ ಹಲವು ಅಂಗಡಿಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಲಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು.

ಸಿಎಂ ಭೇಟಿ ಬೆನ್ನಲ್ಲೇ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಮೇಲೆ ದಾಳಿ ನಡೆಸಿದ ಪೊಲೀಸರು, 19 ಅಪ್ರಾಪ್ತರನ್ನು ರಕ್ಷಿಸಿದ್ದಾರೆ ಮತ್ತು ನಾಲ್ವರು ಅಂಗಡಿ ಮಾಲೀಕರನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಉಪ ಪೊಲೀಸ್ ಆಯುಕ್ತ(ಉತ್ತರ)ರ ಮೇಲ್ವಿಚಾರಣೆಯಲ್ಲಿ ಐದು ವಿಶೇಷ ತಂಡಗಳು ಯಶವಂತಪುರ ಎಪಿಎಂಸಿ ಮಾರುಕಟ್ಟೆ ಮೇಲೆ ದಾಳಿ ನಡೆಸಿವೆ.

ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಇಂದು ಮಾರುಕಟ್ಟೆಯಾದ್ಯಂತ ವ್ಯಾಪಕ ದಾಳಿ ನಡೆಸಿ 19 ಅಪ್ರಾಪ್ತ ವಯಸ್ಕರನ್ನು ರಕ್ಷಿಸಿವೆ. ಇವರಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಹದಿಮೂರು ಮಕ್ಕಳು ಬಿಹಾರದವರು, ಉಳಿದವರು ಪಶ್ಚಿಮ ಬಂಗಾಳ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕ ಮೂಲದವರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಎಪಿಎಂಸಿ ಯಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಅಂಗಡಿ ಮಾಲೀಕರಾದ ಶಾಹಿದ್, ಅಮೀರ್, ಪ್ರಕಾಶ್ ಮತ್ತು ಸೈಫ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

“ಲೋಡಿಂಗ್, ಅನ್ ಲೋಡಿಂಗ್ ಮತ್ತು ಟ್ರಕ್ ಚಲನೆಯಂತಹ ಅಪಾಯಕಾರಿ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಲಾಗಿದೆ. ಇದು ತುಂಬಾ ಗಂಭೀರ ಸಮಸ್ಯೆಯಾಗಿದೆ. ಈ ಸಂಬಂಧ ಪ್ರಕರಣಗಳನ್ನು ದಾಖಲಿಸಲಾಗಿದೆ, ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಹೆಚ್ಚುವರಿ ಶಂಕಿತರನ್ನು ಗುರುತಿಸಲು ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

error: Content is protected !!